Tuesday, March 28, 2017

ಯುಗಾದಿಯಾಚರಣೆಯಲ್ಲಿ ದೇಶಕಾಲದ(spacetime) ಚಿಂತನೆ

ವಿಜ್ಞಾನಿಗಳೆಂದ ತಕ್ಷಣ ನಮ್ಮ ಮನಸಿನಲ್ಲಿ ಬರುವುದು ಐನ್‍ಸ್ಟಿನ್ ಮತ್ತು ನ್ಯೂಟನ್. ಅದರಲ್ಲೂ ಐನ್‍ಸ್ಟಿನ್ ನಮಗೆ ಹತ್ತಿರದಲ್ಲಿ ಬದುಕಿದ್ದರಿಂದ ಅವರೇ ಮೊದಲು ಬರುತ್ತಾರೆ. ಅರೇ ನಮಗೆ ಹತ್ತಿರ ಎಂದರೆ ಅವರೂ ಭಾರತದವರಾ? ಅಥವಾ ಕರ್ನಾಟಕದವರೇ ಎಂದು ಕೇಳಬೇಡಿ. ಒಬ್ಬ ವ್ಯಕ್ತಿಯ ಇರುವಿಕೆ ತಿಳಿಯ ಬೇಕಾದರೆ ಕೇವಲ ಆತ ನಿಂತಿರುವ ಸ್ಥಳ ಒಂದೇ ಸಾಲದು. ಆತ ಆ ಸ್ಥಳದಲ್ಲಿ ಯಾವ ಸಮಯದಲ್ಲಿ ಇದ್ದ ಎಂಬುದು ಬಹುಮುಖ್ಯವಾಗುತ್ತದೆ. ಅಂದರೆ ಸ್ಥಳದ ಜೊತೆ ಕಾಲ ಕೂಡ ಒಂದು ಮಾನದಂಡ. ಈ ಪರಿಕಲ್ಪನೆ ಕೊಟ್ಟಿದ್ದು ಹರ್ಮನ್ ಮಿಂಕೋವ್ಸ್ಕಿ(Hermann Minkowski), ಐನ್‍ಸ್ಟಿನ್ನ ಗುರು. ಐನ್‍ಸ್ಟಿನ್ ಈ ಪರಿಕಲ್ಪನೆಯನ್ನು ತನ್ನ ಥಿಯೇರಿ ಆಫ್ ರಿಲೇಟಿವಿಟಿಯಲ್ಲಿ ಬಳಸಿ ವಿಶ್ವವಿಖ್ಯಾತರಾದರು. ಮಿಂಕೋವ್ಸ್ಕಿ ಇದನ್ನು ಸ್ಪೇಸ್‍ಟೈಮ್ ಎಂದು ಕರೆದನು. ಅಂದರೆ ನಮ್ಮ ಭಾಷೆಯಲ್ಲಿ ದೇಶಕಾಲ ಎನ್ನುತ್ತಾರೆ. ಹಾಗಾಗಿ ಐನ್‍ಸ್ಟಿನ್ 1879-1955ರಲ್ಲಿ ಬದುಕಿದ್ದರಿಂದ ಅವರು ನಮಗೆ ಹತ್ತಿರದವರು ಎಂದು ಹೇಳಿದ್ದು.
ಏನಿದು ಸ್ಪೇಸ್‍ಟೈಮ್ ಅಥವಾ ದೇಶಕಾಲ? ಒಂದು ಉದಾಹರಣೆಯೊಂದಿಗೆ ವಿವರಿಸಲು ಪ್ರಯತ್ನಿಸುತ್ತೇನೆ. ನೀವು ಒಂದು ಪ್ರವಾಸ ಹೋಗಿದ್ದಿರೆಂದು ಭಾವಿಸಿ, ಪ್ರವಾಸದ ಬಗ್ಗೆ ಬರೆಯಲು ಇಷ್ಟ ಪಡುತ್ತೀರಿ, ಬರೆಯುವಾಗ ನೀವು ಪ್ರವಾಸದ ಸ್ಥಳಗಳ ಜೊತೆಗೆ ಆ ಸ್ಥಳಗಳನ್ನು ಭೇಟಿ ಮಾಡಿದ ದಿವಸವನ್ನು ಸೇರಿಸಿದರೆ ಆ ದಾಖಲೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಕನ್ನಡದ ದೃಶ್ಯ ಎಂಬ ಚಲನಚಿತ್ರವನ್ನು ನೆನಪಿಸಿಕೊಳ್ಳಿ, ಚಿತ್ರದ ನಾಯಕ ಪೊನ್ನಪ್ಪ ಮಾರ್ಚ್ ಒಂದನೇ ತಾರೀಖು ನಂಜನಗೂಡಿಗೆ ಹೋಗಿದ್ದು ಎಂಬ ದಾಖಲೆ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆಂದು. ಹಾಗಾಗಿ ಯಾವುದಾದರೂ ಪ್ರಬಲವಾದ ದಾಖಲೆಗೆ  ನಮ್ಮ ಇರುವಿಕೆ ತಿಳಿಸಬೇಕಾದರೆ ಸ್ಥಳದ ಜೊತೆ ಕಾಲ ಕೂಡ ಬಹು ಮುಖ್ಯವಾದದ್ದು.
ನಾಳೆ ಯುಗಾದಿ, ಇದು ಸಂಪೂರ್ಣ ಕಾಲದ ನಿಯಾಂತಕ(parameter), ನಮ್ಮ ಕಾಲದ ರೇಖೆಯಲ್ಲಿ ಮತ್ತೊಂದು ಹೊಸ ಹೆಜ್ಜೆಯನ್ನು ಇಡುವ ಸಮಯ. ಅಂದರೆ ಕಳೆದ ಒಂದು ವರ್ಷ ನಾವು ಬದುಕಿದ್ದು ದುರ್ಮುಖ ಎಂಬ ಸಂವತ್ಸರದಲ್ಲಿ, ಹಿಂದೂ ಕಾಲಗಣತಿಯ ಪ್ರಕಾರ ಒಂದು ವರ್ಷ ಎಂದರೆ ಒಂದು ಸಂವತ್ಸರ. ನಾಳೆ ಆ ದುರ್ಮುಖ ಸಂವತ್ಸರದಿಂದ ಹೇಮಲಂಬ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಇರುವಿಕೆಯಲ್ಲಿ ನಾವಿಡುವ ಪ್ರತೀ ಹೆಜ್ಜೆ ನಮ್ಮ ಸ್ಥಳವನ್ನು ಬದಲಿಸುವುದಲ್ಲದೇ ಸಮಯದಲ್ಲೂ ಬದಲಾವಣೆಯಾಗುತ್ತದೆ.  ನಮಗೆ ಈ ಸ್ಪೇಸ್‍ಟೈಮ್ ಪರಿಕಲ್ಪನೆ ಮಿಂಕೋವ್ಸ್ಕಿಗಿಂತಾ ಮುಂಚಿನಿಂದಲೂ ತಿಳಿದಿತ್ತು.  ಹಾಗಂತಾ ಮಿಂಕೋವ್ಸ್ಕಿ ಸಾಧನೆ ದೊಡ್ಡದಲ್ಲ ಎಂದು ಹೇಳುತ್ತಿಲ್ಲ, ಆತ ಪ್ರತ್ಯೇಕವಾಗಿ ಕಂಡುಹಿಡಿದಿರಬಹುದು ಅಥವಾ ನಮ್ಮಿಂದ ಪ್ರಭಾವಿತನಾಗಿರಬಹುದು. ಪ್ರತೀ ಪೂಜೆಯಲ್ಲೂ ಮೊದಲು ಮಾಡುವುದು ಸಂಕಲ್ಪ, ಸಂಕಲ್ಪವಿಲ್ಲದ ಪೂಜೆಗೆ ಫಲವಿಲ್ಲ ಎಂದು ಹೇಳುತ್ತಾರೆ. ಸಂಕಲ್ಪದ ಮಂತ್ರ ಹೀಗಿದೆ
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣ: ದ್ವೀತೀಯಪರಾರ್ಧೇ, ಶ್ರೀಶ್ವೇತವರಾಹಕಲ್ಪೇ,
ವೈವಸ್ವತ ಮನ್ವಂತರೇ, ಅಷ್ಟಾವಿಂಶತಿತಮೇ ಕಲಿಯುಗೇ, ಪ್ರಥಮಪಾದೇ,
ಜಂಬೂದ್ವೀಪೇ, ಭರತವರ್ಷೇ,  ಭರತಖಂಡೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇತೀರೇ,
ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ, ಅಸ್ಮಿನ್ವರ್ತಮಾನೇ,_______ ಸಂವತ್ಸರೇ,
_______ಆಯನೇ, ___________ಋತೌ, ____________ಮಾಸೇ, __________ಪಕ್ಷೇ, 
______ತಿಥೌ, ________ವಾಸರೇ, __________ನಕ್ಷತ್ರೇ, ಶುಭಯೋಗ, ಶುಭಕರಣ, 
ಏವಂಗುಣ ವಿಶೇಷಣ ವಿಶಿಷ್ಟಾಯಾಮ್ ಶುಭತಿತೌ...
ಇಲ್ಲಿ ಗಮನಿಸಿದರೆ ದೇಶಕಾಲದ ಪರಿಕಲ್ಪನೆ ಸ್ಪಷ್ಟವಾಗಿ ಕಾಣುತ್ತದೆ. ನಾವು ಮಾಡುತ್ತಿರುವ ಪೂಜೆ ಎಲ್ಲಿ(ಸ್ಥಳ), ಯಾವ ಸಮಯದಲ್ಲಿ(ಕಾಲ) ಮಾಡುತ್ತಿದ್ದೇವೆಂದು ದೇವರಿಗೆ ತಿಳಿಸಿ ಮುಂದುವರೆಯಬೇಕು. ಆದ್ಯ ಬ್ರಹ್ಮಣಃ ಇಂದ ಪ್ರಾರಂಭಗೊಂಡು ಪ್ರಥಮಪಾದೆ ವರೆಗೂ ಕಾಲವನ್ನು ಜಂಬೂದ್ವೀಪೇ ಇಂದ ದಕ್ಷಿಣೇತೀರೇ ವರೆಗೂ ನಾವಿರುವ ಸ್ಥಳವನ್ನೂ, ಪುನಃ ಶಾಲಿವಾಹನ ಶಕೇ ಇಂದ ನಕ್ಷತ್ರೇ ವರೆಗೂ ಲೌಕಿಕ ಕಾಲಗಣನೆಯನ್ನು ಕಾಣಬಹುದು. ಒಂದೊಂದಾಗಿ ನೋಡೋಣ.
ಮೊದಲು ನಾವಿರುವ ಸ್ಥಳವನ್ನು ನೋಡೋಣ, ಸಾಮಾನ್ಯವಾಗಿ ನಾವು ನೋಡುವ ಭೂಮಿಯ ಪಟ ನಿಜವಾದ ಪಟವಲ್ಲ, ಎಲ್ಲಾ ದೇಶ, ಖಂಡಗಳ ಆಕಾರ ಪಟದಲ್ಲಿ ಕಾಣುವಂತಿಲ್ಲ. ಹಲವಾರು ರೀತಿ ಭೂಮಿಯನ್ನು ಕಾಗದದ ಮೇಲೆ ಇಳಿಸಬಹುದು. ಅದಕ್ಕೆ ವಿಜ್ಞಾನದಲ್ಲಿ ಪ್ರೊಜೆಕ್ಷನ್ ಎಂದು ಕರೆಯುತ್ತಾರೆ. ಭೂಮಿಯ ಹಲವು ಪ್ರೊಜೆಕ್ಶನ್‍ಗಳನ್ನು ಇಲ್ಲಿ ಕಾಣಬಹುದು.
ಈಗ ಜಂಬೂದ್ವೀಪದ ವಿಷಯಕ್ಕೆ ಬರೋಣ. ಇಡೀ ಭೂಮಂಡಲವನ್ನು "ಸಪ್ತದ್ವೀಪಾ ವಸುಮತಿ" ಎಂದೂ ಕರೆಯುತ್ತಾರೆ. ಇದು ಒಂದು ಬಗೆಯ ಪ್ರೊಜೆಕ್ಷನ್ ಎಂದು ಭಾವಿಸಬಹುದು. ಪುರಾಣಗಳಲ್ಲಿ ತಿಳಿಸಿರುವಂತೆ ಈ ಪ್ರೊಜೆಕ್ಷನ್ನಿನಲ್ಲಿ ಏಳು ದ್ವೀಪಗಳನ್ನು ಏಳು ಸಾಗರಗಳು ವೃತ್ತಾಕಾರದಲ್ಲಿ ಬೇರ್ಪಡಿಸಿವೆ. ಏಳು ದ್ವೀಪಗಳ ಹೆಸರು ಇಂತಿವೆ. ಜಂಬೂದ್ವೀಪ, ಪ್ಲಾಕ್ಷದ್ವೀಪ, ಶಾಲ್ಮಲೀದ್ವೀಪ, ಕುಶದ್ವೀಪ, ಕ್ರೌಂಚದ್ವೀಪ, ಶಕದ್ವೀಪ ಮತ್ತು ಪುಷ್ಕರದ್ವೀಪ. ಜಂಬೂದ್ವೀಪ ಎಂಬುದು ಪುರಾಣದ ಏಳು ದ್ವೀಪಗಳಲ್ಲಿ ಒಂದು. ಜಂಬೂಫಲ ಎಂದರೆ ನೇರಳೇ ಹಣ್ಣು. ಅತಿ ಹೆಚ್ಚು ಜಂಬೂಫಲಗಳು ಇದ್ದುದರಿಂದ ಆ ದ್ವೀಪವನ್ನು ಜಂಬೂದ್ವೀಪವೆಂದು ಕರೆಯಲ್ಪಟ್ಟರು. ಜಂಬೂದ್ವೀಪವನ್ನು ಚಿತ್ರದಲ್ಲಿ ಗಮನಿಸಬಹುದು. ಜಂಬೂದ್ವೀಪವನ್ನು ಒಂಬತ್ತು ಭಾಗಗಳನ್ನಾಗಿ ವಿಭಾಗ ಮಾಡಿದ್ದಾರೆ, ಅದರಲ್ಲಿ ನಾವಿರುವುದು ಭರತವರ್ಷೇ ಭರತಖಂಡೇ ಅಂದರೆ ನಮ್ಮ ಭಾರತದ ಒಂದು ತುಂಡು(ಖಂಡ) ದಂಡಕಾರಣ್ಯ, ಅಂದರೆ ಈಗಿನ ಆಂದ್ರ, ಮಹರಾಷ್ಟ್ರ ಹಾಗು ಒರಿಸ್ಸಾದ ಕೆಲ ಭಾಗಗಳು ಇರುವ ದೇಶದಲ್ಲಿ ಗೋದಾವರ್ಯಾ: ದಕ್ಷಿಣೇತೀರೇ- ಗೋದಾವರಿಯ ದಕ್ಷಿಣ(ಗೋದಾವರಿಯ ಮೇಲಿರುವವರು ಗಂಗಾಯಾ ದಕ್ಷಿಣೇ ಪಾರ್ಶ್ವೇ-ಗಂಗೆಯ ದಕ್ಷಿಣ) ಭಾಗದಲ್ಲಿ ನಿಂತು ಈ ಸಂಕಲ್ಪವನ್ನು ಮಾಡುತ್ತಿದ್ದೇನೆ ಎಂದು ನಾವಿರುವ ಸ್ಥಳವನ್ನು ದೇವರಿಗೆ ತಿಳಿಸಬೇಕು.

ಈಗ ಕಾಲದ ಕಲ್ಪನೆಯನ್ನು ನೋಡೋಣ, ಕಾಲದ ರೇಖೆಯಲ್ಲಿ ಬ್ರಹ್ಮಕಲ್ಪದಿಂದ ಪ್ರಾರಂಭಿಸೋಣ. ಬ್ರಹ್ಮಕಲ್ಪ(ಅಥವಾ ಪರ) ಎಂದರೆ ಬ್ರಹ್ಮನ ನೂರು ವರ್ಷಗಳು. ಒಂದು ಪರವನ್ನು ಎರಡು ಭಾಗವನ್ನಾಗಿ ಮಾಡಿದರೆ ಅದರಲ್ಲಿ ಉತ್ತರಾರ್ಧ ಅಥವಾ ದ್ವಿತಿಯಪರಾರ್ಧದಲ್ಲಿ ನಾವಿದ್ದೇವೆ. ಬ್ರಹ್ಮನ ಒಂದು ದಿನ(ಹಗಲು+ರಾತ್ರಿ) ಎಂದರೆ ಎರಡು ಕಲ್ಪಗಳು. ಒಟ್ಟು ಮೂವತ್ತು ಕಲ್ಪಗಳಿವೆ (ಶ್ವೇತವರಾಹ, ನೀಲಲೋಹಿತ, ವಾಸುದೇವ, ರಥಂತರ, ರೌರವ, ಪ್ರಾಣ, ಬೃಹತ್, ಕಂದರ್ಪ, ಸದ್ಯ, ಈಶಾನ, ವ್ಯಾನ, ಸಾರಸ್ವತ, ಉದಾನ, ಗಾರುಡ, ಕೌರ್ಮ, ನಾರಸಿಂಹ, ಸಮಾನ, ಆಗ್ನೇಯ, ಸೋಮ, ಮಾನವ, ತತ್ಪುರುಷ, ವೈಕುಂಠ, ಲಕ್ಷ್ಮಿ, ಸಾವಿತ್ರಿ, ಘೋರ, ವಾರಾಹ, ವೈರಾಜ, ಗೌರಿ, ಮಾಹೇಶ್ವರ, ಪಿತೃ). ನಾವೀಗ ಇರುವುದು ಶ್ವೇತಕಲ್ಪದಲ್ಲಿ. ಅಲ್ಲಿಗೆ ನಾವೀಗಿರುವುದು ಬ್ರಹ್ಮನ ಐವತ್ತೊಂದನೇ ವರ್ಷದ ಮೊದಲನೇ ದಿನದ ಬೆಳಗಿನ ಜಾವದಲ್ಲಿದ್ದೇವೆ. ಒಂದು ಕಲ್ಪ ಎಂದರೆ ಹದಿನಾಲ್ಕು ಮನ್ವಂತರಗಳು (ಸ್ವಾಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ,
ಚಾಕ್ಷುಷ, ವೈವಸ್ವತ, ಸಾವರ್ಣಿ, ದಕ್ಷಸಾವರ್ಣಿ, ಬ್ರಹ್ಮಸಾವರ್ಣಿ, ಧರ್ಮಸಾವರ್ಣಿ, ರುದ್ರಸಾವರ್ಣಿ, ದೇವಸಾವರ್ಣಿ, ಇಂದ್ರಸಾವರ್ಣಿ). ನಾವಿರುವುದು ವೈವಸ್ವತ ಮನ್ವಂತರದಲ್ಲಿ. ಒಂದು ಮನ್ವಂತರವನ್ನು ಎಪ್ಪತ್ತೊಂದು ಮಹಾಯುಗಗಳನ್ನಾಗಿಯೂ, ಒಂದು ಮಹಾಯುಗವೆಂದರೆ ನಾಲ್ಕು ಯುಗಗಳಾಗಿಯೂ(ಕೃತ, ತ್ರೇತ, ದ್ವಾಪರ, ಕಲಿ) ವಿಭಾಗಿಸಿದ್ದಾರೆ. ನಾವೀಗ ಇರುವುದು ಅಷ್ಟಾವಿಂಶತಿತಮೇ ಕಲಿಯುಗೇ- ಇಪ್ಪತ್ತೆಂಟನೇಯ ಮಹಾಯುಗ. ಅಂದರೆ ಇಲ್ಲಿಯವರೆಗೂ ಇಪ್ಪತ್ತೇಳು ಬಾರಿ ಕಲಿಯುಗಗಳು ಬಂದಿವೆ. ಇದಿಷ್ಟೂ ಬ್ರಹ್ಮನ ಆಯಸ್ಸಿನ ಪ್ರಕಾರ ವಿಭಾಗಿಸಿದರೆ ಮುಂದಿನದ್ದು ಲೌಕಿಕ ಕಾಲಗಣನೆ.
ಶಾಲೀವಾಹನ ಶಕೇ- ಶಕೆ ಎಂದರೆ ಒಬ್ಬ ಶ್ರೇಷ್ಠ ರಾಜನ ಆಳ್ವಿಕೆಯ ಕಾಲ(ಉದಾಹರಣೆಗೆ ಬೇಕಿದ್ದರೆ ಇದನ್ನು ಮೋದಿ ಶೆಕೆಯೆಂದೂ ಕರೆಯಬಹುದು 👅). ಹಾಗೆ ಅನೇಕ ರಾಜರ ಶೆಕೆಗಳಾದ ನಂತರ ನಾವಿರುವುದು ಶಾಲಿವಾಹನ ಎಂಬ ರಾಜನ ಕಾಲಘಟ್ಟದಲ್ಲಿ. ಆತನ ಕಾಲಘಟ್ಟದಲ್ಲಿ ನಾವಿರುವುದು 1938ನೇ ವರ್ಷ. ಇದನ್ನು ನಮ್ಮ 2017ನೇ ವರ್ಷದ ಜೊತೆ ಹೋಲಿಸಬಾರದು. ಏಕೆಂದರೆ ಶಾಲಿವಾಹನನ ಆಳ್ವಿಕೆ ಪ್ರಾರಂಭವಾಗಿ 1938 ವರ್ಷಗಳು ಕಳೆದಿದೆ(ಉದಾಹರಣೆಗೆ 2017ನ್ನು ಮೋದಿ ಶೆಕೆ 3 ಎಂದು ಕರೆಯಬಹುದು). ನಾಳೆಯಿಂದ 1939ನೇ ವರ್ಷ ಪ್ರಾರಂಭ. ನಂತರ ಬೌದ್ಧಾವತಾರೇ ಅಂದರೆ ಇದುವರೆಗೂ ಆಗಿರುವ ವಿಷ್ಣುವಿನ ಅವತಾರಗಳಲ್ಲಿ  ಕೊನೆಯ ಅವತಾರ ಬೌದ್ಧಾವತಾರ ಹಾಗಾಗಿ ಮುಂದಿನ ಅವತಾರ ಕಲ್ಕಿ ಬರುವವರೆಗೂ ನಾವು ಬೌದ್ಧಾವತಾರದ ಕಾಲ ಘಟ್ಟದಲ್ಲಿರುತ್ತೇವೆ ಎಂದರ್ಥ. ರಾಮಕ್ಷೇತ್ರೇ ಅಂದರೆ ಶ್ರೀರಾಮ ಓಡಾಡಿದ ಪುಣ್ಯ ಭೂಮಿಯಲ್ಲಿ ನಾವಿದ್ದು ಚಂದ್ರನ ಮಾನದಲ್ಲಿ ಇರುವ ಅರವತ್ತು ಸಂವತ್ಸರದಲ್ಲಿ ನಾವು ದುರ್ಮುಖ ಸಂವತ್ಸರವನ್ನು ದಾಟಿ ಹೇಮಲಂಬ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಸಂವತ್ಸರವನ್ನು ಎರಡು ಆಯನಗಳಾಗಿ/ಆರು ಋತುಗಳಾಗಿ, ಪ್ರತೀ ಋತುವನ್ನು ಎರಡು ಮಾಸಗಳನ್ನಾಗಿ, ಪ್ರತೀ ಮಾಸವನ್ನು ಚಂದ್ರನ ಆಧಾರದ ಮೇಲೆ ಎರಡು ಪಕ್ಷಗಳನ್ನಾಗಿ ಪ್ರತೀ ಪಕ್ಷವನ್ನು ಹದಿನೈದು ತಿಥಿಗಳನ್ನಾಗಿ ವಿಭಾಗಿಸಿದ್ದಾರೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಗೂಗಲ್‍ನ ಜಿಪಿಎಸ್ ಕೊಡುವ ಮಾಹಿತಿಯನ್ನು ನಾವು ನಮ್ಮ ಸಂಕಲ್ಪದಲ್ಲಿ ಈ ರೀತಿ ಹೇಳಿಕೊಂಡು ನಾನು ಇಲ್ಲಿ, ಈ ಸಮಯದಲ್ಲಿ ಪೂಜೆಯನ್ನು ಮಾಡುತ್ತಿದ್ದೇನೆೆಂದು ಹೇಳಿ ಮುಂದುವರೆಯಬೇಕು.
ದುರ್ಮುಖ ಸಂವತ್ಸರದಲ್ಲಿ ಭೀಕರ ಬರಗಾಲವನ್ನು ಎದುರಿಸಿದ್ದೇವೆ, ಈ ಹೇಮಲಂಬಿ ಸಂವತ್ಸರದಲ್ಲಾದರೂ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ಸರ್ವರೂ ಧರ್ಮಾಚರಣೆಯನ್ನು ಮಾಡಲಿ, ಸತ್ಕರ್ಮಗಳನ್ನು ಮಾಡುವ ಮನಸ್ಸು ಕೊಡಲಿ ಎಂದೂ ದೇವರಲ್ಲಿ ಪ್ರಾರ್ಥಿಸೋಣ. ಸರ್ವರಿಗೂ ಹೇಮಲಂಬಿ ಸಂವತ್ಸರದ ಶುಭಾಶಯಗಳು.

Tuesday, March 14, 2017

ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ಸಂಧರ್ಭ ಸಹಿತ ವಿವರಿಸಿ

"ರಾಮ ಮದ್ಯಪಾನ ಮಾಡುತ್ತಾನೆ, ಸ್ತ್ರೀ ಸಂಘ ಮಾಡುತ್ತಾನೆ" ಈ ವಾಕ್ಯವನ್ನು ಪರಾಮರ್ಶಿಸುವ ಮುನ್ನ ಶಾಲಾ ದಿನದ ಆ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ರಾಮ ರಾಜನಾದರೆ ಮದ್ಯಪಾನ ಮಾಡುತ್ತಾನೆ, ಸ್ತ್ರೀ ಸಂಘ ಮಾಡುತ್ತಾನೆ ಎಂದು ಮಂಥರೆ ಕೈಕೇಯಿಗೆ ಹೇಳುತ್ತಾಳೆ. ಕೈಕೇಯಿಯಲ್ಲಿ ರಾಮನ ಬಗ್ಗೆ ಕೆಟ್ಟ ಯೋಚನೆ ಬರಲಿ, ಭರತನನ್ನು ರಾಜನನ್ನಾಗಿಸಲು ದಶರಥನ ಬಳಿ ಕೇಳಿಕೊಳ್ಳುವಂತಾಗಲಿ ಎಂಬ ಕಾರಣಕ್ಕೆ ಹೀಗೆ ಹೇಳುತ್ತಾಳೆ.
ಇಲ್ಲಿ ಆ ವಾಕ್ಯದ ಕಂಟೆಕ್ಸ್ಟ್ ಪ್ರಗತಿಪರರಿಗೆ ಬು.ಜೀಗಳಿಗೆ, ದೇಶವನ್ನು ಉದ್ಧಾರ ಮಾಡುತ್ತೇವೆ ಎಂದು ಟೊಂಕ ಕಟ್ಟಿ ನಿಂತವರಿಗೆ ಬೇಕಾಗಿಲ್ಲ. ಅಲ್ಲಿ ಇದನ್ನು ಯಾರು ಯಾರಿಗೆ ಹೇಳಿದರು ಸಂಧರ್ಭ ಸಹಿತ ವಿವರಿಸಿ ಎಂಬ ಪ್ರಶ್ನೆ ಹಾಕಿಕೊಳ್ಳುವುದಿಲ್ಲ.
ಮೊನ್ನೆ ಒಂದು ಪ್ರಕರಣ ನಡೆಯಿತು. ಸಾಹಿತಿ ಯೋಗೀಶ್ ಮಾಸ್ಟರ್ ಎಂಬುವರಿಗೆ ಯಾರೋ ಕಿಡಿಗೇಡಿಗಳು ಮಸಿ ಬಳೆದಿದ್ದಾರೆ.
ಹಾಗೆಯೇ ಸ್ವಲ್ಪ ದಿನಗಳ ಹಿಂದೆ ಸಾಹಿತಿಯೊಬ್ಬರಿಗೆ ಮತ್ತೊಬ್ಬ ಸಾಹಿತಿ ಸಭೆಯಲ್ಲಿ ಚಪ್ಪಲಿ ತೋರಿಸಿದ ಪ್ರಸಂಗ ನಡೆದಿತ್ತು.
ಈ ಎರಡು ಪ್ರಕರಣಗಳನ್ನು ಯಾವುದೇ ಎಡ ಬಲಗಳ ಯೋಚನೆ ಮಾಡದೇ ವಿರೋಧಿಸಬಹುದು. ಮಸಿ ಬಳೆಯುವುದು ಚಪ್ಪಲಿ ತೋರಿಸುವುದು ಅಥವಾ ಎಸೆಯುವುದು ಅವರನ್ನು ವಿರೋಧಿಸುವ ದಾರಿಯಲ್ಲ. ಆದರೆ ಇಲ್ಲಿ ಆ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಯಾರು ಯಾರಿಗೆ ಮಸಿ ಬಳೆದದ್ದು, ಚಪ್ಪಲಿ ತೋರಿಸಿದ್ದು ಎಂಬುದರ ಮೇಲೆ ಪ್ರ.ಪ ಬು.ಜೀಗಳ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ.
ಅದೇ ರೀತಿ ಯಾವುದೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಪ್ರತಿಕ್ರಿಯೆ ಸಮಾನವಾಗಿರಬೇಕು ಆದರೆ ಅಲ್ಲಿಯೂ ಯಾರು ಮಾಡಿಕೊಂಡಿದ್ದು, ಸಂಧರ್ಭ ಅಥವಾ ಆತನ ಹಿನ್ನಲೆ ಮೇಲೆ ಇವರುಗಳ ಪ್ರತಿಕ್ರಿಯೆ ಹೋರಾಟಗಳು ಅವಲಂಬಿತವಾಗಿರುತ್ತದೆ.
ಅಷ್ಟೆಲ್ಲಾ ಯಾಕೆ ಬಿಡಿ ಹಾಕಿಕೊಳ್ಳುವ ಬಟ್ಟೆಗೂ ಆ ಪ್ರಶ್ನೆ ಹಾಕಿಕೊಂಡೇ ಪ್ರತಿಕ್ರಿಯೆ ಕೊಡುತ್ತಾರೆ. ಮೊದಲನೇಯದಾಗಿ ತೆರಿಗೆ ಕಟ್ಟಿ ತಾನು ಸಂಪಾದಿಸಿದ ಹಣದಲ್ಲಿ ಏನು ಬೇಕಾದರೂ ಮಾಡುವ ಧರಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅಂತಾಗಿಯೂ ಯಾವುದೋ ಕಾರಣವಿಟ್ಟುಕೊಂಡು ಪ್ರಶ್ನಿಸುವುದಾದರೆ ನಿಶ್ಪಕ್ಷಪಾತವಾಗಿ ಪ್ರಶ್ನಿಸಬೇಕು. ಲಕ್ಷಾಂತರ ಬೆಲೆಬಾಳುವ ವಾಚು, ಪಂಚೆ, ಕನ್ನಡಕ ಹಾಕಿಕೊಂಡವರ ಸರ್ಕಾರ ಬಡವರ ಸರ್ಕಾರವೆಂದೆನಿಸುತ್ತದೆ, ದೇಶಕ್ಕಾಗಿ ಹಗಲು ರಾತ್ರಿ ದುಡಿಯುವವ,  ದೇಶದ ಬಗ್ಗೆ ಪ್ರಪಂಚದೆಲ್ಲೆಡೆ ಒಳ್ಳೆಯ ಮಾತನ್ನಾಡುವಂತೆ ಮಾಡಿದವರು ಹಾಕಿಕೊಂಡ ಸೂಟಿನ ಮೇಲೆ ಇವರ ಆರೋಪ. ಸೂಟು ಬೂಟಿನ ಸರ್ಕಾರ ಎಂದವರು ವಾಚು ರೇಬಾನ್ ಸರ್ಕಾರ ಎನ್ನಲಿಲ್ಲ, ಕಾರಣ ಯಾರು ಏನನ್ನು ಹಾಕಿಕೊಂಡರು? ಹಾಕಿಕೊಂಡವರು ನಮ್ಮವರಾ(ಧರ್ಮ,ಜಾತಿ,ಒಡೆಯ) ಎಂಬ ಪ್ರಶ್ನೆ.
ಕೊನೆಯದಾಗಿ ನಾನು ಹೇಳ ಹೊರಟಿರುವುದು ಇಷ್ಟೇ, ನಮ್ಮ ಅಭಿಪ್ರಾಯ ಯಾವುದೇ ಪೂರ್ವಗ್ರಹ ಪೀಡಿತವಾಗಿರದೆ, ಪೂರ್ಣ ಹಿನ್ನಲೆಯನ್ನು ತಿಳಿದು ನಿಶ್ಪಕ್ಷಪಾತವಾಗಿರಲಿ.