Sunday, August 6, 2017

ಆಧಾರ

     ಸಂಜೆ ದಾರಿದೀಪಗಳು ಕಣ್ಣುಜ್ಜಿಕೊಂಡು ಏಳುವ ಹೊತ್ತು. ರಾಜೀವ ಅವನ ಬಾಸು ಹೇಳಿದ ಕೆಲಸವನ್ನು ಅವಸರದಲ್ಲೇ ಮುಗಿಸಿ ಆಫೀಸಿನಿಂದ ಆತುರಾತುರದಲ್ಲಿ ಹೊರಟ. ದಾರಿಯುದ್ದಕ್ಕೂ ಅವನಲ್ಲಿ ಅದೇನೋ ಚಿಂತೆ ಕಾಡುತಿತ್ತು. ಗಾಡಿಯ ಹಾರನ್ ಅನ್ನು ಪಿಸ್ತೂಲಿನ ಗುಂಡಂತೆ ಕಂಡ ಕಂಡವರ ಮೇಲೆಲ್ಲಾ ಹಾರಿಸುತ್ತಿದ್ದ. ಟ್ರಾಫಿಕ್ಕಿನಲ್ಲಿ ನಿಂತಾಗ ಜೇಬಿಂದ ಮೊಬೈಲ್ ಅನ್ನು ತೆಗೆದು ಹೆಲ್ಮೆಟಿನ ಸಂದಿಯಲ್ಲಿ ತೂರಿಸಿ ಯಾರಿಗೋ ಕೂಗಾಡುತ್ತಿದ್ದ. ಅಕ್ಕಪಕ್ಕದವರೆಲ್ಲಾ ಇವನ ರಂಪಾಟಕ್ಕೆ ಮನಸಿನಲ್ಲೇ ಇವನಿಗೇನಾಗಿದೆ ಅಂತ ಬಯ್ದುಕೊಳ್ಳುತ್ತಿದ್ದರು. ಹಲವು ಕಡೆ ಎಡಕ್ಕೆ ಸಿಗ್ನಲ್ ಹಾಕಿ ಬಲಕ್ಕೆ ತಿರುಗಿ ಹೋಗುತ್ತಿದ್ದ. ಐದು ನಿಮಿಷ ಬಂದೆ ಎನ್ನುತ್ತ ತನ್ನ ವೇಗವನ್ನು ಹೆಚ್ಚಿಸಿದ. ಸೂರ್ಯ ಇವನ ಅವಸರ ಕೂಗಾಟವನ್ನು ನೋಡಿ ಸ್ವಲ್ಪ ಬೇಗನೇ ಅಸ್ತಂಗತನಾದ.

    ರಾಜೀವ ಹಾವೇರಿಯ ಒಂದು ಸಣ್ಣ ಹಳ್ಳಿಯಿಂದ ಬೆಂಗಳೂರಿಗೆ ಬಂದು ಮೂರು ವರ್ಷಗಳಾಗಿದ್ದವು. ಮೆಕಾನಿಕಲ್ ಇಂಜಿನಿಯರಿಂಗ್ ಓದಿದ್ದ ರಾಜೀವ ಬೆಂಗಳೂರಿನ ಯಾವುದೋ ಸಣ್ಣ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಂದ ಸಂಬಳವನ್ನು ತಮ್ಮ ರಘುವಿಗೆ ಮತ್ತು ಊರಿನಲ್ಲಿದ್ದ ಅಮ್ಮನಿಗೆ ಕಳಿಸಿ ಉಳಿದಿದ್ದನ್ನು ತನ್ನ ಖರ್ಚಿಗೆ ಇಟ್ಟುಕೊಳ್ಳುತ್ತಿದ್ದ. ಯಾವುದೇ ದುಶ್ಚಟಗಳಿಲ್ಲದ ಕಾರಣ ರೂಮ್ ಬಾಡಿಗೆ ಊಟದ ಖರ್ಚು, ಪೆಟ್ರೋಲ್ ಖರ್ಚು ಎಲ್ಲಾ ಹೋಗಿ ಪರ್ಸಿನಲ್ಲಿ ಒಂದೆರಡು ಸಾವಿರ ಉಳಿಯುತಿತ್ತು. ಅದನ್ನು ತಮ್ಮ ಯಾವುದೋ ಪ್ರಾಜೆಕ್ಟ್, ನೋಟ್ಸ್, ಎಕ್ಸಾಮ್ ಫೀ ಎಂದು ಕೇಳಿ ಪಡೆಯುತ್ತಿದ್ದ. ಕೊನೆಯಲ್ಲಿ ಅವನ ಪರ್ಸಿನಲ್ಲಿ ಐದು ನೂರಿನ ಚಿಲ್ಲರೆ ಬಿಟ್ಟರೆ ಡಿಎಲ್, ತನ್ನ ಅಪ್ಪ ಅಮ್ಮನ ಫೋಟೋ ಹಾಗೂ ಯಾವುದೋ ವಿಸಿಟಿಂಗ್ ಕಾರ್ಡುಗಳು.
    ಅಂದು ಸಂಜೆ ಆತನ ರೂಮೇಟ್ ಫೋನ್ ಮಾಡಿ ನಾನು ಕೀ ಕಳೆದು ಕೊಂಡಿದ್ದೇನೆ ಸ್ವಲ್ಪ ಅರ್ಜೆಂಟಿನ ಕೆಲಸವಿದೆ ಬೇಗ ಬಾ ಎಂದು ಪೀಡಿಸುತಿದ್ದ. ರಾಜೀವನಿಗೆ ಆತನ ರೂಮೇಟಿನ ಪರಿಸ್ಥಿತಿ ತಿಳಿದಿತ್ತು. ಆದರೂ ಫೋನಿನಲ್ಲಿ ಕೂಗಾಡುತ್ತಾ ಬರುತ್ತಿದ್ದ. ಗಾಡಿ ಜೋರಾಗಿಯೇ ಮುನ್ನುಗ್ಗುತ್ತಿತ್ತು. ರೂಮಿನ ತಿರುವಿನಲ್ಲಿ ತಿರುಗಬೇಕು ಅಷ್ಟರಲ್ಲಿ ಜೇಬಿನಿಂದ ಮೊಬೈಲ್ ಗುರ್ರ್ಗುಟ್ಟುತಿತ್ತು. ಈ ಸಾರಿ ಚೆನ್ನಾಗಿಯೇ ಬಯ್ಯಬೇಕೆಂದು ಎಡಗೈನಲ್ಲಿ ಕ್ಲಚ್ ಹಿಡಿದು ಬಲಗೈಯಲ್ಲಿ ಮೊಬೈಲ್ ರಿಸೀವ್ ಮಾಡಿದೊಡನೆ ಹತಾಟ್ಟನೆ ಎದುರಿಗಿದ್ದ ಗುಂಡಿಯಲ್ಲಿ ಗಾಡಿ ಇಳಿದು ಆತ ಮಾರು ದೂರ ಹಾರಿ ಕೆಳಗೆ ಬಿದ್ದ. ಹಿಂದೆಯೇ ಇದ್ದ ಕಾರು ಆತನ ಕಾಲುಗಳ ಮೇಲೆ ಏರಿತ್ತು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಆಘಾತ ಕಾದಿತ್ತು. ಮೆದುಳಿಗೆ ತನ್ನ ಕೈಯಲ್ಲಿ ಹಿಡಿದ ಮೊಬೈಲ್ ಹಿಡಿದಂತೆಯೇ ಇದೆ, ಆದರೆ ಕೈ ಆತನ ದೇಹದಿಂದ ಬೇರ್ಪಟ್ಟಿತ್ತು. ಮೆದುಳಿನಿಂದ ಹಲವು ಮಾತು ಹೊರಡುತ್ತಿದೆ ಆದರೆ ಬಾಯಿಯಿಂದ ಹೊರ ಬರುತ್ತಿಲ್ಲ. ಆತನ ರಕ್ತಸಿಕ್ತ ಸ್ಥಿತಿಯನ್ನು ಕಂಡು ಅಕ್ಕಪಕ್ಕದಲ್ಲಿದ್ದ ಜನ ಲೊಚುಗಿಡುತ್ತಾ, ಹತ್ತಿರ ಹೋಗಲೂ ಭಯ ಪಡುತ್ತಾ ನಿಂತಿದ್ದರು. ತನ್ನ ಇನ್ನೊಂದು ಕೈಯಲ್ಲಿ ಎಲ್ಲರನ್ನು ಬನ್ನಿ ಬನ್ನಿ ಎಂದು ಕರೆಯುತಿದ್ದ. ಅದನ್ನು ನೋಡಿದ ಎಂತವರಿಗೂ ಒಂದು ಕ್ಷಣ ಹೃದಯ ನಿಲ್ಲುವುದು ಖಚಿತ.
    ಕೊನೆಯಲ್ಲಿ ಒಂದಿಬ್ಬರು ಅವನ ಹತ್ತಿರ ಬಂದು ರಕ್ತದಲ್ಲಿ ಮಿಂದಿದ್ದ ತಲೆಯನ್ನು ಹಿಡಿದು ಆತನ ಮಾತಿಗಾಗಿ ಕಿವಿಗೊಟ್ಟರು. ಎಲ್ಲವೂ ಅಸ್ಪಷ್ಟ. ಆದರೆ ಎಲ್ಲರಿಗೂ ಆತ ಏನೋ ಹೇಳಬಯಸುತ್ತಿದ್ದಾನೆ ಎಂಬುದು ಖಾತ್ರಿಯಾಗಿತ್ತು.
    ಅಷ್ಟರಲ್ಲಿ ಅವನ ರೂಮೇಟ್ ಹತ್ತಿರವೇ ಕೇಳುತಿದ್ದ ಗದ್ದಲ ಕೇಳಿ ನೋಡಲು ಬಂದ. ನೋಡಿದರೆ ಆತನ ಗೆಳೆಯ. ಓಡಿ ಬಂದವನೇ ಅವನನ್ನು ಎತ್ತಿಕೊಂಡ, ಗೆಳೆಯನ ಕೈಯಲ್ಲಿ ರಾಜೀವನಿಗೋ ಒಂದು ರೀತಿಯ ನೆಮ್ಮದಿಯ ಭಾವ ಉಂಟಾಯಿತು. ಅನಾಥವಾಗಿ ಸಾಯುವುದಿಲ್ಲವೆಂಬ ಧೈರ್ಯವೋ ಏನೋ ಅಂತೂ ಇಂತೂ ಅವನ ಬಾಯಿಂದ ಕೆಲ ಶಬ್ಧಗಳು ಕೇಳಿದವು. ಅದು ಅಲ್ಲಿ ನೆರೆದಿದ್ದ ಜನರಿಗೆಲ್ಲಾ ಒಂದು ಪಾಠವಾಗಿತ್ತು. 
ತಮ್ಮ ಜೀವನದಲ್ಲೂ ಇಂಥಹಾ ಪರಿಸ್ಥಿತಿ ಬಂದರೆ ಮುಂಜಾಗೃತವಾಗಿ ಏನೆಲ್ಲಾ ಮಾಡಬೇಕೆಂಬ ನೀತಿ. ಸುತ್ತಾ ನೆರೆದಿದ್ದ ಜನರ ಗದ್ದಲದಲ್ಲಿ ಅವನ ಬಾಯಿಂದ ಹೊರಟ ಆ ಮಾತುಗಳು...
"ನನ್ನ ಆಧಾರ್ ಕಾರ್ಡ್ ಕೆಂಪು ಶೆರ್ಟಿನ ಜೇಬಿನಲ್ಲಿದೆ"
😜😜😄
Aadhaar Number Required For Death Certificate From October 1