Friday, September 14, 2018

ದಾಸರ ವಿಶೇಷ ಹಾಡುಗಳು

ಮನ್ಮಥ ಜನಕನ ಮರೆತ ಮನುಜರು ಮರ ಮರ ಮರ ಮರ ಮರ ಮರ ||ಪ||
ಚಿನ್ಮಯ ರೂಪವ ಚಿಂತಿಸದವನು ಛೀ ಛೀ ಛೀ ಛೀ ಛೀ ಮನುಜ||ಅ||
ಸುರರುವಂದ್ಯನ ಸುತ್ತದ ಕಾಲು ಸೂಳೆ ಮನೆಯ ಮಂಚದ ಕಾಲು
ಗರುಡಗಮನಗೆ ನಮಿಪದ ಶಿರವೂ
ಉರಗನ ವಿಷ ತಲೆಯೂ||
ನಾರಾಯಣ ಕಥೆ ಕೇಳದ ಕಿವಿಗಳು
ತೋರುವ ಮಾಳಿಗೆ ನಾಳಗಳು
ನರಹರಿ ರೂಪವ ನೋಡದ ಕಣ್ಣು
ನವಿಲುಗರಿಯ ಕಣ್ಣು||
ಮಂಗಳ ಮೂರ್ತಿಯ ಪಾಡದ ಕಂಠ
ಒಡೆದು ಹೋದ ಹರವಿಯ ಕಂಠ
ಮಂಗಳಾಂಗ ಶ್ರೀ ಪುರಂದರ ವಿಠಲನ
ಮರೆತವ ಅಗಸರ ಕತ್ತೆ ನಿಜವೂ||



ರಾಗ ನವರೋಜು /ಆದಿ ತಾಳ

ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ || ಪಲ್ಲವಿ ||

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ || ೧ ||

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ || ೨ ||

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠ್ಠಲರಾಯನ ಈ ಪರಿ
ಮರೆತು ಸದಾ ನೀವ್ ಚರಿಸುವಿರಿ || ೩ ||




ರಾಗ ಧನಶ್ರೀ ಅಟತಾಳ)

ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ ಮ್ಯಾಂ ||ಪ||
ಮಾರ್ಜಾಲಕಾಟವನ್ನು ತಡೆಯಲಾರೆವು ಕೃಷ್ಣ ||ಅ||

ಅಡಿಗೆಮನೆಯಲ್ಲಿ ಗಡಬಡ ಬರುವುದು
ಗಡಿಗೆ ಒಡೆದು ಹಾಲ್ ಮೊಸರ ಕುಡಿಯುವುದು ||

ಹಾಲ ಕುಡಿವ ಬಗೆ ಮೂಲೆಲಿ ಕೂತುಕೊಂಡು
ಹಾಲಿನ ಮೇಲಿನ ಕೆನೆ ಕಾಲಲಿ ತಿಂದು ||

ಹಾಗಲು ಹೀಗಲು ಮೀಸಲಾಕಿದ ಹಾಲು
ಪುರಂದರವಿಠಲಗೆ ಸೇರಿತು ಮಾಲು ||



ಲೇಖನದಲ್ಲಿ ಪ್ರಸ್ತಾವಿಸಿದ ಉಮಾ-ರಮಾ ಸಂವಾದದ ಪದ್ಯ ಇಲ್ಲಿದೆ. ನೀವು ದಾಖಲಿಸಿರುವ ಪದ್ಯದಲ್ಲೂ ದಶಾವತಾರಗಳ ಬಣ್ಣನೆ ಇರುವುದು ಸ್ವಾರಸ್ಯವನ್ನು ಹೆಚ್ಚಿಸಿದೆ!

ತರಳೆ ರನ್ನೆ ಕಪ್ಪು ಮೈಯವ ಯಾತರ ಚೆಲುವನೇ ।
ಕರಿಯ ಜಟೆಯ ಜೋಗಿಗಿಂತ ಉತ್ತಮನಲವೆನೆ ।।
ಜಲಧಿಯೊಳಗೆ ವಾಸವೇನೆ ಮನೆಗಳಿಲ್ಲವೆ ।
ಲಲನೆ ಕೇಳು ಮಸಣಕ್ಕಿಂತ ಲೇಸು ಅಲ್ಲವೇ ।।
ಮಂದರಗಿರಿಯ ಪೊತ್ತಿಹುದು ಏನು ಚಂದವೇ ।
ಕಂದನ ಕೊರಳು ಕತ್ತರಿಸುವುದು ಯಾವ ನ್ಯಾಯವೇ ।।
ಮಣ್ಣನಗೆದು ಬೇರ ಮೆಲುವುದೇನು ಸಾಧುವೇ ।
ತನ್ನ ಕೈಯಲ್ಲಿ ಕಪಾಲ ಪಿಡಿವುದು ಯಾವ ನ್ಯಾಯವೇ ।।
ಮುತ್ತಿನ ಹಾರ ಇರಲು ಕರುಳ ಮಾಲೆಯ ಧರಿಪರೇ ।
ನಿತ್ಯ ರುಂಡ ಮಾಲೆಯ ಧರಿಸೋದು ಯಾವ ನ್ಯಾಯವೇ ।।
ಗಿಡ್ಡನಾಗಿ ಬೆಳೆದು ಅಳೆವುದು ಏನು ನ್ಯಾಯವೇ ।
ಗುಡ್ಡದ ಮಗಳ ತಂದೆಗೆ ಮುನಿಯೋದ್ಯಾವ ನ್ಯಾಯವೇ ।।
ಪಿತನ ಮಾತ ಕೇಳಿ ಮಾತೆಯ ಶಿರವನಳಿವರೇ ।
ಕ್ಷಿತಿಕಂಠನಾಗಿ ಇರುವುದು ಯಾವ ನ್ಯಾಯವೇ ।।
ಕೋಡಗ ಕರಡಿ ಕಪಿಗಳ ಹಿಂಡು ಬಂಧು ಬಳಗವೇ ।
ಕೂಡಿ ಬಂದ ಭೂತ ಬಳಗ ಜ್ಞಾತಿ ಸಂಬಂಧವೇ ।।
ಹಾವಿನ ಹೆಡೆಯ ತುಳಿವರೇನೇ ಅಂಜಿಕಿಲ್ಲವೇ ।
ಹಾವೇ ಮೈಯಿಗೆ ಸುತ್ತಿ ಇರಲು ಹ್ಯಾಂಗೆ ಜೀವಿಪನೇ ।।
ಬತ್ತಲೆ ಇರುವನೇನು ಅವಗೆ ನಾಚಿಕಿಲ್ಲವೇ ।
ಸತ್ತ ಗಜದ ಚರ್ಮ ಹೊದೆಯಲು ಹೇಸಿಕಿಲ್ಲವೇ ।
ಉತ್ತಮ ತೇಜ ಇರಲು ಧರೆಯೊಳು ಹದ್ದನು ಏರ್ವರೇ ।
ಎತ್ತಿನ ಬೆನ್ನು ಏರಿದವರು ಬುದ್ಧಿವಂತರೇ ।।
ಹರಿಹರರಿಗೆ ಸಾಮ್ಯವೇನೆ ಹೇಳೆ ರುಕ್ಮಿಣೀ ।
ಪುರಂದರ ವಿಟ್ಠಲ ಸರ್ವೋತ್ತಮ ಹೇಳು ಮನದಣಿ ।।
* * *